== ಜನನ == ಶಂಕರನಾರಾಯಣನಿಗೆ, ಬಾಲ್ಯದಿಂದಲೇ ಸಂಗೀತದಲ್ಲಿ ತೀವ್ರವಾದ ಆಸಕ್ತಿ. ಹಾಡುಗಾರಿಕೆ,ಮೊದಲು ಅವರನ್ನು ಆಕರ್ಶಿಸಿದರೂ, ಆತ್ತಿಗೆಯವರ ವೀಣಾವಾದನದ ಕಲೆ ಅವರನ್ನು ಬಹಳವಾಗಿ ಸೆಳೆಯಿತು. ಹಾಗಾಗಿ ಅತ್ತಿಗೆಯವರೇ ಅವರಿಗೆ ವೀಣೆಯಲ್ಲಿ ಅತ್ಯಂತ ಹೆಚ್ಚಿನ ಶ್ರೇಯಸ್ಸುಗಳಿಸಲು ನೆರವಾದರು.'ಶಂಕರನಾರಾಯಣ ರಾವ್', ಕರ್ನಾಟಕ ರಾಜ್ಯದ ಮೈಸೂರಿನ ಹತ್ತಿರವಿರುವ,ನಂಜನಗೂಡ್ ನಲ್ಲಿ ಸನ್ ೧೯೨೦ ನವೆಂಬರ್ ೧೮ ರ, ಗುರುವಾರದಂದು ಜನಿಸಿದರು. ಅವರ ತಂದೆಸಿ.ಎನ್.ಕೃಷ್ಣಮೂರ್ತಿ ಮತ್ತು ತಾಯಿ ಶ್ರೀಮತಿ ಪುಟ್ಟಮ್ಮನವರು. ಬಾಲಕ ಶಂಕರನಿಗೆ ಬಾಲ್ಯದಿಂದಲೂ ಸಂಗೀತ ಕಲಿಯಲು ಅತ್ಯಂತ ಆಸಕ್ತಿ. ’ಚಿಕ್ಕಬಳ್ಳಾಪುರದ ಪ್ರಾಧಮಿಕ ಶಾಲೆ’ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ, ಅಂದಿನ ದಿನಗಳಲ್ಲಿ ಶಾಲೆಯ ಪ್ರಚಲಿತ ಪ್ರಾರ್ಥನೆಗಳಾದ,’ಸ್ವಾಮಿದೇವನೆ ಲೋಕಪಾಲನೆ’, ಮತ್ತು ಕಾಯೌ ಶ್ರೀಗೌರಿ ಗೀತೆಗಳನ್ನು ಅತ್ಯಂತ ಶ್ರದ್ಧೆಯಿಂದ ಎಲ್ಲರ ಮುಂದಾಳಾಗಿ ಹಾಡುತ್ತಿದ್ದ ಸನ್ನಿವೇಶಗಳನ್ನು ಅವರ ಸಮಕಾಲೀನರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. ಅವರ ಅಣ್ಣ ಸಿ.ಕೆ. ನಾಗರಾಜರು, ಮದುವೆಯಾದದ್ದು, ವೀಣೆ ಕಲಿತ ರಾಜಾಮಣಿ ಅವರನ್ನು. ಹೀಗಾಗಿ ಸಿ.ಕೆ.ಎಸ್.ಅವರಿಗೆ ಅವರ ಅತ್ತಿಗೆಯವರೇ ಪ್ರಥಮ ಗುರುವಾದರು. == ವಿದ್ವಾನ್, ಎ.ಎಸ್.ಚಂದ್ರಶೇಖರಯ್ಯನವರ ಬಳಿ ಕಲಿಕೆ == ಶಂಕರನಾರಾಯಣರಿಗೆ,ಚಿಕ್ಕ ವಯಸ್ಸಿನಿಂದಲೂ ಸಂಗೀತದ ಗೀಳು ಒಡಮೂಡಿತ್ತು; ಅದರಲ್ಲೂ ವೀಣಾವಾದನದಲ್ಲಿ ಅಪರಿಮಿತ ಆಸಕ್ತಿ. ಹಲವಾರು ವರ್ಷಗಳ ಕಾಲ ಕೆಲವಾರು ಸಂಗೀತ ಶಿಕ್ಷಕರಿಂದ ಕಲಿತರೂ, ಅವರಿಗೆ ಸಮಾಧಾನವಾಗಲಿಲ್ಲ. ಮೇರು ವ್ಯಕ್ತಿಯೋರ್ವರಿಂದ ಕಲಿತು ಅಭ್ಯಾಸ ಮಾಡಿ, ವೀಣಾವಾದನವನ್ನು ಸಂಪೂರ್ಣವಾಗಿ ಕರಗತಮಾಡಿಕೊಳ್ಳುವ ಮಹದಾಶೆ ಅವರದಾಗಿತ್ತು. ಕೊನೆಗೆ ತಮ್ಮ ೨೧ ನೆಯ ವಯಸ್ಸಿನಲ್ಲಿ, ಬಹಳ ದಿನಗಳಿಂದ ಕನಸು ಕಾಣುತ್ತಿದ್ದ ಅಂತಹ ಸುಯೋಗ ಒದಗಿ ಬಂತು. ಸನ್ ೧೯೪೧ ರ ಜುಲೈನಲ್ಲಿ ಖ್ಯಾತ ವೀಣಾವಾದಕ ದಿವಂಗತ 'ಶೇಷಣ್ಣನವರ ಮೊಮ್ಮಗ ಎ.ಎಸ್.ಚಂದ್ರಶೇಖರಯ್ಯನವರ ಬಳಿ ಶಿಷ್ಯವೃತ್ತಿ ಮಾಡುತ್ತ ವೀಣೆಯನ್ನು ಕಲಿಯುವ ಸುಸಂಧಿ ಪ್ರಾಪ್ತವಾಯಿತು. ಹೀಗೆ ತಾನಾಗಿ ಯೇ ಒದಗಿಬಂದ ಅವಕಾಶವನ್ನು ಉಪಯೋಗಿಸಿಕೊಂಡು, ಸತತವಾಗಿ ಸುಮಾರು ೧೦ ವರ್ಷಗಳ ಗುರುಗಳ ಒಡನಾಟದಿಂದ ಶಂಕರನಾರಾಯಣರಿಗೆ ಸಂಗೀತದಲ್ಲಿ ಸಿದ್ಧಿ ಕೈಗೂಡಿತು. ಗುರುಗಳು ಮೈಸೂರು, ಬೆಂಗಳೂರು, ಶೃಂಗೇರಿಗಳಲ್ಲಿ ಕೊಡುತ್ತಿದ್ದ ಸಂಗೀತ ಕಛೇರಿಯ ಕಾರ್ಯಕ್ರಮ ಗಳಲ್ಲಿ ಶ್ರದ್ಧೆಯಿಂದ ಭಾಗವಹಿಸಿ ತಮ್ಮ ನೌಪುಣ್ಯತೆಯನ್ನು ಹೆಚ್ಚಿಸಿಕೊಂಡರು. ಅಂತೆಯೆ ಗುರುಗಳ ಒಟ್ಟಿಗೆ, ಹೈದರಾಬಾದ್, ಮದ್ರಾಸ್, ಪೂನಾ, ಮುಂಬಯಿ, ದೆಹಲಿ, ಅಜ್ಮೀರ್ ಮುಂತಾದ ಕಡೆಗಳಲ್ಲೂ ಕಾರ್ಯಕ್ರಮಗಳನ್ನು ಸಮರ್ಥವಾಗಿ ಕೊಟ್ಟರು. == 'ತರಂಗಿಣಿ ಸಂಗೀತ ಸಂಸ್ಥೆಯ ಸ್ಥಾಪನೆ' == ೧೯೭೦ ರಲ್ಲಿ 'ತರಂಗಿಣಿ ಸಂಸ್ಥೆ'ಯ ಮೂಲಕ ಪ್ರತಿ ವರ್ಷವೂ ’ಶ್ರೀಪುರಂದರದಾಸರ-ತ್ಯಾಗರಾಜರ ಆರಾಧನೋತ್ಸವ’ಗಳನ್ನೂ, ’ವೀಣೆ ಶೇಷಣ್ಣನವರ ಜಯಂತಿ’ಯನ್ನೂ ಮತ್ತಿತರ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಶಂಕರನಾರಾಯಣರಾಯರ ವೃತ್ತಿಜೀವನದ ೩೦ ವರ್ಷ ಕರ್ನಾಟಕ ದಲ್ಲಾದರೆ, ನಂತರದ ೬ ದಶಕಗಳಿಗೂ ಮೀರಿ ಮುಂಬಯಿನಲ್ಲಿ ವಾಸ್ತವ್ಯ ಹೊಂದಿದ್ದರು. ತಮ್ಮ ಬದುಕಿನ ಹೆಚ್ಚು ಸಮಯ, ವೀಣೆ ಮತ್ತು ಗ್ರಂಥಗಳೊಂದಿಗೆ ತೊಡಗಿಸಿಕೊಂಡರು. ಓದಿನ ಗೀಳು ಹೆಚ್ಚಾಗಿತ್ತು. ಇದರ ಜೊತೆಗೆ ಬರೆಯುವ ಹಂಬಲವಿತ್ತು. ಸಂಗೀತವಲ್ಲದೆ, ಸಾಹಿತ್ಯ, ನಾಟಕ, ಸಿನಿಮಾರಂಗದಲ್ಲಿ ಬಹಳ ಯಶಸ್ವಿಯಾಗಿ ತಮ್ಮನ್ನು ತೊಡಗಿಸಿ ಕೊಂಡರು. ಅನೇಕ ನಾಟಕಗಳನ್ನು ಬರೆದು ಅದರಲ್ಲಿ ಪಾತ್ರಾಭಿನಯವನ್ನೂ ಮಾಡಿದ್ದಾರೆ. ಹಲವು ಸಂಸ್ಕೃತ ನಾಟಕಗಳಲ್ಲಿ ಸಂಭಾಷಣೆಗಳು ಅವರಿಗೆ ಕಂಠಪಾಠವಾಗಿತ್ತು. 'ನಚಿಕೇತ,ಯಮ'ರ ಸಂಭಾಷಣೆ ಕುರಿತು ನಾಟಕ ರಚಿಸಿದ್ದರು. ಮೈಸೂರ್ ಅಸೋಸಿಯೇಷನ್, ಮುಂಬಯಿ ಜೊತೆ ಹೆಚ್ಚು ಉತ್ತಮ ಬಾಂಧವ್ಯವಿತ್ತು. ಅಲ್ಲಿ ನಡೆದ ನಾಟಕಗಳಲ್ಲಿ ಪಾತ್ರವಹಿಸಿದ್ದರು. == ಮುಂಬಯಿಜೀವನದಲ್ಲಿ == ಮುಂಬಯಿಗೆ ಬಂದ ಹೊಸದರಲ್ಲಿ, ಹೆಂಡತಿ ಜಯಮ್ಮನವರನ್ನು, ಮಕ್ಕಳನ್ನು ಮಡದಿಯ ತವರು ಮನೆ, ಚಿಕ್ಕಬಳ್ಳಾಪುರಕ್ಕೆ ಕಳುಹಿಸಿ ತಮ್ಮ ವೃತ್ತಿಯನ್ನು ಮುಂಬಯಿನಲ್ಲಿ ಮುಂದುವರೆಸಿದರು. ಮನೆಗೆ ಬಾಡಿಗೆ ಕೊಡುವಷ್ಟು ಅನುಕೂಲವಿರಲಿಲ್ಲ. ತಮ್ಮ ಸಂಗೀತ ಪಾಠದಲ್ಲಿ ಬಂದ ಸ್ವಲ್ಪ ಹಣವನ್ನು ತಂದೆಯವರಿಗೆ ಕಳುಹಿಸಿ ಕೊಡುತ್ತಿದ್ದರು. ಆ ಸಮಯದಲ್ಲಿ ಅವರ ನೆರವಿಗೆ ಬಂದ ಗೆಳೆಯರು, ಆರ್.ಡಿ.ಚಾರ್, ಡಾ.ವೈದ್ಯನಾಥನ್, ಬಿ.ನಾರಾಯಣ ಸ್ವಾಮಿ, ಗರುಡಾಚಾರ್, ಗೋಪಾಲ್ ಐಯ್ಯಂಗಾರ್ ಮೊದಲಾದ ಶಿಷ್ಯ ಕುಟುಂಬಗಳವರು. 'ಶಾಸ್ತ್ರೀಯ ಸಂಗೀತ'ದಲ್ಲಿ ಶಂಕರನಾರಾಯಣರಿಗಿದ್ದ 'ಸಮರ್ಪಣಾಭಾವ,' ಹಾಗೂ ಶ್ರದ್ಧೆ, ಪ್ರೀತಿಗಳನ್ನು ಗುರುತಿಸಿದ ಗುರುಗಳು, ತಮ್ಮ ಅಜ್ಜ, ವೀಣೆ ಶೇಷಣ್ಣನವರ ಇಚ್ಛೆಯಂತೆ ಅವರು ಶ್ರಮಪಟ್ಟು ಸಾಧಿಸಿದ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಮುನ್ನಡೆಯಲು ಪ್ರೇರೇಪಿಸಿದರು. == ತರಂಗಿಣಿ ಸಂಗೀತ ಅಕಾಡೆಮಿ == ಶಂಕರನಾರಾಯಣರಾಯರು, ೧೯೫೦ ರಲ್ಲಿ ಮುಂಬಯಿನಲ್ಲಿ ನೆಲೆಸಿ, ಮುಂಬಯಿನ ಉಪನಗರವಾದ ಚೆಂಬೂರಿನಲ್ಲಿ ೧೯೭೦ ರಲ್ಲಿ, ’ತರಂಗಿಣಿ ಅಕ್ಯಾಡೆಮಿ ಶಾಲೆ’ಸ್ಥಾಪಿಸಿ, ಅದನ್ನು ಕ್ರಮಬದ್ಧವಾಗಿ ನಡೆಸಿಕೊಂಡು ಬಂದರು. ಈ ಸಂಗೀತ ಶಾಲೆಯಿಂದ ಕಲಿತು ಮಾರ್ಗದರ್ಶನ ಹೊಂದಿದ ನೂರಾರು ಹೊಸಪ್ರತಿಭೆಗಳು ದೇಶದಾದ್ಯಂತ ವೀಣೆಯ ಮಾಧುರ್ಯವನ್ನು ಸಂಗೀತಾಸಕ್ತರಿಗೆ ಉಣಬಡಿಸುತ್ತಿದ್ದಾರೆ. ಈ ವಿದ್ಯಾಸಂಸ್ಥೆಯ ಅಡಿಯಲ್ಲಿ, ಸನ್, ೧೯೭೮ ರಲ್ಲಿ,ವೀಣೆ ಶೇಷಣ್ಣನವರ ೧೨೫ ನೇ ವರ್ಧಂತ್ಯೋತ್ಸ ವವನ್ನು ಅದ್ಧೂರಿಯಿಂದಲೂ, ಅರ್ಥಗರ್ಭಿತವಾಗಿಯೂ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಭಾಗವಹಿಸಿದ ಮೇರು ವ್ಯಕ್ತಿಗಳು : ವೀಣೆ ದೊರೈಸ್ವಾಮಿ ಅಯ್ಯಂಗಾರ್, ವಿದ್ವಾನ್ ಚಂದ್ರಶೇಖರಯ್ಯ, ಸ್ವರಮೂರ್ತಿ, ವಿ.ವಿ.ರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ನಾರಾಯಣಮೆನನ್, ಮುಂತಾದ ಪ್ರಸಿದ್ಧ ಕಲಾವಿದರು. ಇವರ ಭಾಗವಹಿಸುವಿಕೆಯೊಂದಿಗೆ ವಿಜೃಂಭಣೆಯಿಂದ ಆಚರಿಸಿ, ಸಮಾರಂಭದ ಸವಿ ನೆನಪು ಎಲ್ಲರ ಮನಸ್ಸಿನಲ್ಲೂ ಉಳಿಯುವಂತೆ ಮಾಡಿದ್ದಾರೆ. ಸರಳ ಬದುಕು, ಧೀಮಂತ ಚಿಂತನೆಗಳು, ಸಿ.ಕ. ಶಂಕರನಾರಾಯಣರಾಯರ ವಿಶೇಷತೆಯಾಗಿತ್ತು. ಅವರ ಸಂಗೀತ ಪ್ರತಿಭೆ, ಮತ್ತು ವ್ಯಕ್ತಿತ್ವ ಅಸಾಧಾರಣವಾದದ್ದು. == ಶ್ರೀಲಂಕಾ ಪ್ರವಾಸ == ೧೯೮೩ ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡ ಶಂಕರನಾರಾಯಣರಾಯರು, ಕರ್ನಾಟಕ ಸಂಗೀತದ ಮಾಧುರ್ಯವನ್ನು ವೀಣಾವಾದನದ ಮೂಲಕ ಆಯೋಜಿಸಿ, ಅಲ್ಲಿನ ಸಂಗೀತ ರಸಿಕರ ಮನಸ್ಸನ್ನು ತಣಿಸಿದರು. 'ಮುಂಬಯಿನ ಮೈಸೂರು ಅಸೋಸಿಯೇಶನ್', 'ಕರ್ನಾಟಕ ಸಂಘ', 'ಮುಂಬಯಿ ಕನ್ನಡ ಸಂಘ', [೧]'ಡೊಂಬಿವಲಿ ಮೈಸೂರ್ ಸಂಗೀತ ವಿದ್ಯಾಲಯ'ಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಕ್ರಮವಾಗಿ ಕೊಡುತ್ತಾ ಬಂದರು. 'ಸಿ.ಕೆ.ಎಸ್' ರವರು ಕನ್ನಡ, ಹಾಗೂ ಸಂಸ್ಕೃತಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. == ಪ್ರಶಸ್ತಿ/ಸನ್ಮಾನಗಳು == ಮುಂಬಯಿನ ಉಪನಗರ, 'ಚೆಂಬೂರಿನ ನಾದಬ್ರಹ್ಮಸಂಸ್ಥೆ,' ಮತ್ತು 'ನಾದಾಂಜಲಿ ಗಾನಕಲಾ ಸಭಾ', 'ಬೆಂಗಳೂರಿನ ಗಾನ ಕಲಾ ಪರಿಷತ್', ಶಂಕರನಾರಾಯಣರನ್ನು ಕರೆಸಿ, ಸನ್ಮಾನಿಸಿ ಗೌರವ ಸೂಚಿಸಿದರು. ಅವರ '೬೦ ನೆಯ ಹುಟ್ಟುಹಬ್ಬ', ಹಾಗೂ '೭೫ ರ ಹುಟ್ಟುಹಬ್ಬದ ಸಮಾರಂಭ'ಗಳನ್ನು ಅವರ ಮುಂಬಯಿ ಶಿಷ್ಯವೃಂದ ಅತ್ಯಂತ ಆಸ್ತೆ, ಹಾಗೂ ಪ್ರೀತಿಯಿಂದ ನೆರವೇರಿಸಿ, ತಮ್ಮ ಗೌರವವನ್ನು ಸೂಚಿಸಿತ್ತು. ಆ ಸಮಯದಲ್ಲಿ, 'ಸಿ.ಕೆ.ಎಸ್' ರವರು, ಹಿರಿಯ ವಾಗ್ಗೇಯಕಾರರ ಕೃತಿಗಳ ಬಗ್ಗೆ ಸಂಶೋಧನಾ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಅವರ ಶಿಷ್ಯರು ಇಂಗ್ಲೀಷ್ ಭಾಷೆಯಲ್ಲಿ ತಮ್ಮ ಗುರು-ನಮನಗಳನ್ನು ಸಮರ್ಪಿಸಿದ್ದಾರೆ. ಈ ಕೆಳಗೆ ನಮೂದಿಸಿದ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಮೈಸೂರ್ ಅಸೋಸಿಯೇಷನ್, ಮುಂಬಯಿ, ಮುಂಬಯಿ ಕನ್ನಡ ಸಂಘ, ಮುಂಬಯಿ, ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ, ಶ್ರೀರಂಜಿನಿ ಸಂಗೀತ ಸಭಾ, ಚೆಂಬೂರು ಕರ್ನಾಟಕ ಸಂಘ, ಕಂಚಿ ಕಾಮಕೋಟಿ ಪೀಠ, == ವೈಣಿಕ ಶಂಕರನಾರಾಯಣರಾಯರ ಇತರ ಆಸಕ್ತಿಗಳು == 'ವೀಣಾವಾದನ ವಿದ್ವಾಂಸ'ರಾಗಿ, ಅವರು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಭಾಷಣ, ಮುಂತಾದ ಕಾರ್ಯಕ್ರಮಗಳಲ್ಲಿ ಅತ್ಯಂತ ಆಸಕ್ತಿವಹಿಸುತ್ತಿದ್ದರು. ತಮ್ಮ ೯೦ ರ ಇಳಿವಯಸ್ಸಿನಲ್ಲೂ 'ಮೈಸೂರು ಅಸೋಸಿಯೇಷನ್,' 'ಕರ್ನಾಟಕ ಸಂಘ' 'ಮುಂಬಯಿ ಕನ್ನಡ ಸಂಘ'ಗಳ, ಸುಮಾರು ಕಾರ್ಯಕ್ರಮಗಳಿಗೆ ತಪ್ಪದೆ ಬರುತ್ತಿದ್ದರು. 'ಮುಂಬಯಿ ಕನ್ನಡ ಸಂಘದ ಅಜೀವಸದಸ್ಯ'ರಾಗಿದ್ದ 'ರಾವ್' ರವರು, ಅದನ್ನು ಸ್ಥಾಪಿಸಲು ಮೊದಲಾದ ಹಲವು ಗಣ್ಯರಲ್ಲೊಬ್ಬರು. 'ಶಂಕರನಾರಾಯಣ'ರ ಮತ್ತೊಂದು ಪ್ರಮುಖ ಕಾರ್ಯವೆಂದರೆ, 'ಶ್ರೀ ಪುರುಂದರದಾಸರ ಮತ್ತು ಕನಕದಾಸರ ೩೦೦ ಕ್ಕೂ ಹೆಚ್ಚು ಕೃತಿಗಳಿಗೆ ಸ್ವರಸಂಯೋಜನೆ'ಮಾಡಿ,ಪುಸ್ತಕವನ್ನು ಪ್ರಕಟಿಸಿರುತ್ತಾರೆ. ಬೆಂಗಳೂರಿನ ’ಅಂಕಿತ ಪ್ರಕಾಶನ’ ಪ್ರಕಟಿಸಿದ ಅವರ ಪುಸ್ತಕಗಳು, ಅತ್ಯಂತ ಜನಪ್ರಿಯತೆಯನ್ನು ಸಾಧಿಸಿವೆ. ಈ ಅಪರೂಪದ ಕೃತಿ ’ಸ್ವರಸಂಯೋಜನೆ ಸಹಿತ ಶ್ರೀಕನಕ ದಾಸರ ಕೃತಿಗಳು’ ಎನ್ನುವ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ 'ಸ್ವರ ಮಟ್ಟುಹಾಕಿ ಸಂಗೀತ ಪ್ರಪಂಚಕ್ಕೆ ಒಂದು ಒಳ್ಳೆಯ ಕೊಡುಗೆಯನ್ನು ನೀಡಿದ ಕಲಾವಿದರಲ್ಲಿ ಸಿಕೆಎಸ್ ರವರು ಅಗ್ರಪಂಕ್ತಿಗೆ ಸೇರಿದ್ದಾರೆ' ಎಂದು ಹೇಳಿರುವ ಸಂಗೀತ ವಿದುಷಿ,ರಾಜಮ್ಮ ಕೇಶವಮೂರ್ತಿ ’ಅವರ ಮಾತುಗಳು ರಾಯರ ರಚನಾತ್ಮಕ ಪ್ರತಿಭೆಗೆ ಕನ್ನಡಿ ಹಿಡಿದಿವೆ, ಹಾಗೂ ಅತ್ಯಂತ ಅರ್ಥಗರ್ಭಿತವಾಗಿವೆ. == ವೀಣೆ ಸಾರ್ವಭೌಮ ವಾದ್ಯ == ' ' ಎಂಬ ಆಂಗ್ಲಭಾಷೆಯ ಭಾಷಾಂತರ ಕೃತಿಯನ್ನು 'ವೀಣೆ ಸಾರ್ವಭೌಮ ವಾದ್ಯ' ವೆಂದು ಅವರ ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು ತರ್ಜುಮೆ ಮಾಡಿ, ಪ್ರಕಟಿಸಿದರು. ಮದ್ರಾಸಿನ ಸಂಗೀತ ಪ್ರಿಯರಿಗೂ 'ಮೈಸೂರಿನ ವೀಣಾಬಾನಿ' ಅತ್ಯಂತ ಪ್ರಿಯವಾಗಿತ್ತು. ಬೆರಳು ಸಾಗಣೆ,ಗಮಕಗಳ ಒತ್ತು,ಲಾಲಿತ್ಯ, ಮೃದುವಾದ ಗತ್ತು, ಇಂತಹ ಅನೇಕಾನೇಕ ಸಂಗತಿಗಳನ್ನು ಒಳಗೊಂಡ ವಿಚಾರಗಳ ಮಹತ್ವದ ಕೃತಿ. === ಗ್ರಂಥದ ವಿಶೇಷತೆ === ವೀಣೆಯ ಪರಂಪರೆ, ಪೌರಾಣಿಕ, ಐತಿಹಾಸಿಕ ಹಿನ್ನೆಲೆ, ತಯಾರಿಸುವ ವಿಧಾನ, ವಾದ್ಯ ವಿನ್ಯಾಸ, ವಾದ್ಯದ ಉಗಮ, ಸ್ವರೂಪ, ವೀಣೆಯ ಪಾಠಾಂತರಗಳು, ಹಲವು ಸ್ವರಜತಿಗಳು, ವರ್ಣಗಳು, ಸ್ವರಸಂಯೋಜನೆಯ ಜೊತೆ ಕೀರ್ತನೆಗಳನ್ನು ಉದಾಹರಿಸಿದ್ದು, ವಿದ್ಯಾರ್ಥಿಗಳಲ್ಲದೆ, ವಿದ್ವಾಂಸರಿಗೂ ಸಹಾಯಕವಾಗಿದೆ. === ಕಥೆಗಳ ರಚನೆ === 'ವಿಷಕನ್ಯೆ' ಎಂಬ ಕಥೆ ಚಾಣಕ್ಯನ ಕಥೆಯಲ್ಲಿ ಬರುವ ಪಾತ್ರ. ನಂತರ ಅದನ್ನು ನಾಟಕವಾಗಿ ಪರಿವರ್ತಿಸಿದ್ದರು. 'ಪಟ್ಟ ಮಹಿಷಿ ಶಾಂತಲಾ', ರಾಷ್ಟ್ರಾಧ್ಯಕ್ಷರ ಪ್ರಶಸ್ತಿಯನ್ನು ಗಳಿಸಿತು. ರಾಯರಿಗೆ ಇಂಗ್ಲೀಷ್ ಭಾಷೆಯಲ್ಲಿ ಘನವಾದ ಹಿಡಿತವಿತ್ತು. ಇವರ ಕೆಲವು ಲೇಖನಗಳು ಕೆನಡ ಮೊದಲಾದ ರಾಷ್ಟ್ರಗಳಲ್ಲೂ ಪ್ರಕಟವಾಗಿತ್ತು. == ತೌಲನಿಕ ಅಧ್ಯಯನಕ್ಕೆ ಸಹಕಾರಿ == ಸಿ.ಕೆ.ಎಸ್ ಅವರಿಗೆ, ಕನ್ನಡ, ಇಂಗ್ಲೀಷ್ ಭಾಷೆಗಳ ಜೊತೆಗೆ, ತೆಲುಗು, ಮಲೆಯಾಳಂ, ತಮಿಳು ಭಾಷೆಗಳಲ್ಲಿ ಒಳ್ಳೆಯ ಹಿಡಿತವಿತ್ತು. ಇದು ಅವರ ಸಂಗೀತ ಶಾಸ್ತ್ರದ ತೌಲನಿಕ ಅಧ್ಯಯನಕ್ಕೆ ನೆರವಾಯಿತು. == ರುದ್ರವೀಣೆ ಗ್ರಂಥ, ಪ್ರಕಟಿಸಬೇಕಿದೆ == ರಾಯರ ಜೀವಿತದ ಸಮಯದಲ್ಲಿ ಪ್ರಕಟಿಸಲು ಸಿದ್ಧತೆ ಹೊಂದಿದ್ದ, ಇನ್ನೂ ಕರಡು ರೂಪದಲ್ಲಿರುವ ರುದ್ರವೀಣೆ ಗ್ರಂಥ ರೂಪ ಪಡೆಯಬೇಕಿದೆ. == ಕನ್ನಡ ಸಿನಿಮಾಗಳಿಗೆ, ಗೀತರಚನೆ ಮತ್ತು ಸಂಗೀತ ನಿರ್ದೇಶನ == 'ದೈವಲೀಲೆ' ಚಿತ್ರಕ್ಕೆ, ಗೀತ ರಚನೆ, ಮತ್ತು ಸಂಗೀತ ಸಂಯೋಜನೆ, 'ಅಕ್ಕಮಹಾದೇವಿ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದರು. ಕೆಲವು ಕಾರಣಗಳಿಂದ ಅದು ತೆರೆ ಕಾಣಲಿಲ್ಲ. == ನಿಧನ == ೯೦ ರ ಹರೆಯದಲ್ಲಿದ್ದ 'ಶಂಕರನಾರಾಯಣರಾಯರು' ಕೆಲವು ವಾರಗಳಿಂದ ಅಸ್ವಸ್ಥರಾಗಿದ್ದರು. ಸನ್ ೨೦೧೧ ರ, ಜನವರಿ ೧೫ ನೇ(15-1-2011) ತಾರೀಖಿನ ಬೆಳಗ್ಗೆ ೮-೩೦ ಕ್ಕೆ, ಮುಂಬಯಿ ಸಮೀಪದ 'ಥಾಣೆ'ಯಲ್ಲಿದ್ದ ತಮ್ಮ ಮಗನ ಮನೆಯಲ್ಲಿ ನಿಧನರಾದರು. ಶ್ರೀಯುತರಿಗೆ ಒಟ್ಟು ೪ ಜನ ಗಂಡುಮಕ್ಕಳು. 'ಸುಬ್ಬಣ್ಣನವರು', ಸನ್, ೨೦೦೦ ದಲ್ಲಿ ಮರಣ ಹೊಂದಿದ್ದರು. 'ದಿನೇಶ್', 'ಜೈರಾಮ್' 'ಚೇತನ್', === ಸಿ.ಕೆ.ಎಸ್.ಸ್ಮರಣೆ === ಮೈಸೂರ್ ಅಸೋಸಿಯೇಷನ್ ಮುಂಬಯಿನಲ್ಲಿ ಸಿ.ಕೆ.ಎಸ್. ರವರ ನೆನಪಿಗಾಗಿ ಒಂದು ಸಮಾರಂಭವನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಮುಂಬಯಿನ ಹಲವಾರು ಕನ್ನಡ ಸಂಘಗಳು ಪಾಲ್ಗೊಂಡು, ವೀಣಾವಾದನ, ಮತ್ತು ಹಾಡುಗಾರಿಕೆಯ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದರು. == ಉಲ್ಲೇಖಗಳು == == ಆಭಾರ ಮನ್ನಣೆ == 'ನೇಸರು ವಿಶೇಷ ಸಂಚಿಕೆ,